ಶಹೀದ್...!
ಹೊರ ಜಗತ್ತಿನಲ್ಲಿ ಏನೋ ನಡೆಯುತ್ತಿದೆ. ಅಮ್ಮ ಜೋರಾಗಿ ಅಳುತ್ತಿರುವ ಅನುಭೂತಿ ನನಗಾಗುತ್ತಿದೆಯಲ್ಲ. ಅಮ್ಮ ಏಕೆ ಅಳುತ್ತಿರಬಹುದು? ಏನು ಮಾಡಲಿ, ಏನೂ ತಿಳಿಯುತ್ತಿಲ್ಲ ನನಗೆ.
ಬಹಳ ಸಮಯದಿಂದ ಕೇಳುತ್ತಿದ್ದ ಜನರ ಗೊಣಗು, ಶೋಕ ತುಂಬಿದ ಮಾತುಗಳೆಲ್ಲ ಕಳೆದು, ಒಮ್ಮೆಲೆ ಶಾಂತ ವಾತಾವರಣ ನಿರ್ಮಾಣವಾಯಿತೇ? ಅಯ್ಯೋ, ನನಗೆ ಹಸಿವು. ಅಮ್ಮ ಬೆಳಗಿನಿಂದ ಊಟ ಏಕೆ ಮಾಡಲಿಲ್ಲ?
ನನ್ನಮ್ಮ ಗಟ್ಟಿಗಿತ್ತಿ. ನನ್ನನ್ನು ಕುರಿತು ಆ ರಾತ್ರಿ ಮಾತನಾಡಿದಳು. "ನೋಡು ಮಗು, ಇಂದು ಆಗಬಾರದ್ದು ಆಗಿಹೋಯಿತು. ಇನ್ನು ಒಂದು ವಾರದಲ್ಲಿ ಮನೆಗೆ ಬರಬೇಕಿದ್ದ ನಿನ್ನ ತಂದೆ, ಇನ್ನೆಂದೂ ನಮ್ಮಲ್ಲಿಗೆ ಬರಲಾರರು. ನಮ್ಮ ದೇಶದ ಗಡಿಯಲ್ಲಿ ಯುದ್ಧ ನಡೆಯಿತಂತೆ, ನಿನ್ನ ತಂದೆಯು ಅದರಲ್ಲಿ ವೀರವೇಶದಿಂದ ಹೋರಾಡಿದರಂತೆ. ಅನೇಕ ವೈರಿ ಸೈನಿಕರನ್ನು ಕೊಂದು, ನಿನ್ನ ತಂದೆ ಪಾಪಿಯೊಬ್ಬನ ಗುಂಡಿನಿಂದ ವೀರಮರಣ ಹೊಂದಿದರಂತೆ ಮಗು." ಕೊನೆಯ ಮಾತನ್ನು ಹೇಳುವಾಗ ನನ್ನಮ್ಮನಿಗೆ ದುಃಖ ತಡೆಯಲಾಗಲಿಲ್ಲ, ಪಾಪ ನನ್ನಮ್ಮ...!
"ಯಾವ ಕಾರಣಕ್ಕೂ ನಾನು ಧೈರ್ಯಗೆಡುವಂತಿಲ್ಲ, ನೀನು ದುಃಖಪಾಡಬಾರದು, ಸರಿಯೇ?" ಬಹು ಸ್ಪಷ್ಟವಾಗಿ ನನ್ನಮ್ಮ ಹೇಳಿದಳು. ಅಂತೆಯೇ ನಾನು ಅನುಸರಿಸಬೇಕಲ್ಲವೇ...?
ದೇಶಸೇವೆಗಾಗಿ ನನ್ನಪ್ಪ ತಮ್ಮ ಪ್ರಾಣ ತ್ಯಾಗ ಮಾಡಿದರು, ನನಗೆ ನನ್ನ ತಂದೆಯ ಬಗ್ಗೆ ಹೆಮ್ಮೆಯಿದೆ...!
ಜೈ ಹಿಂದ್...🇮🇳
~PRN
Comments
Post a Comment